ರೋಶನಾರಾ ಬಾಗ್ ಮೊಘಲ್ ಚಕ್ರವರ್ತಿ ಷಹಜಹಾನ್ ಅವರ ಎರಡನೇ ಮಗಳಾದ ರೋಶನಾರಾ ಬೇಗಂ ನಿರ್ಮಿಸಿದ ಮೊಘಲ್-ಯುಗದ ಉದ್ಯಾನವಾಗಿದೆ . ಇದು ಕಮಲಾ ನಗರ ಗಡಿಯಾರ ಗೋಪುರದ ಬಳಿ ಇರುವ ಶಕ್ತಿ ನಗರದಲ್ಲಿದೆ ಮತ್ತು ದೆಹಲಿ ವಿಶ್ವವಿದ್ಯಾಲಯದ ಉತ್ತರ ಭಾಗದಲ್ಲಿದೆ. ಇದು ದೆಹಲಿಯ ಅತ್ಯಂತ ದೊಡ್ಡ ಉದ್ಯಾನಗಳಲ್ಲಿ ಒಂದಾಗಿದೆ. ಇದು ಹಲವಾರು ರೀತಿಯ ಸಸ್ಯಗಳನ್ನು ಹೊಂದಿದೆ. ಕೆಲವನ್ನು ಜಪಾನ್‌ನಿಂದ ಆಮದು ಮಾಡಿಕೊಳ್ಳಲಾಗಿದೆ. ಉದ್ಯಾನದ ಒಳಗಿನ ಸರೋವರವು ಚಳಿಗಾಲದಲ್ಲಿ ವಲಸೆ ಹಕ್ಕಿಗಳಿಂದ ಭೇಟಿ ನೀಡಲ್ಪಡುತ್ತದೆ ಮತ್ತು ಇದು ಪಕ್ಷಿ ವೀಕ್ಷಣೆಯ ತಾಣವಾಗಿದೆ. ಉದ್ಯಾನವು ಎತ್ತರದ ಕಾಲುವೆಯನ್ನು ಹೊಂದಿದ್ದು, ಎರಡೂ ಬದಿಗಳಲ್ಲಿ ಹೂವಿನ ಗಿಡಗಳನ್ನು ಹೊಂದಿದೆ. ಇಂದಿಗೂ ಉದ್ಯಾನವು ೧೬೭೧ ರಲ್ಲಿ ನಿಧನರಾದ ರಾಜಕುಮಾರಿ ರೋಶನಾರಾ ಅವರ ನೆನಪಿಗಾಗಿ ನಿರ್ಮಿಸಲಾದ ಬಿಳಿ ಅಮೃತಶಿಲೆಯ ಮಂಟಪವನ್ನು ಹೊಂದಿದೆ ಮತ್ತು ಅವರನ್ನು ಅಲ್ಲೇ ಸಮಾಧಿ ಮಾಡಲಾಗಿದೆ. ೧೯೨೨ ರಲ್ಲಿ ಬ್ರಿಟಿಷರು ಇಲ್ಲಿ ಆರಂಭಿಸಿದ ಎಲೈಟ್ ರೋಶನಾರಾ ಕ್ಲಬ್ ೨೨ ಎಕರೆಗಳಷ್ಟು ವಿಸ್ತಾರವಾಗಿದೆ. ೧೯೨೭ ರಿಂದ ಮೊದಲ ದರ್ಜೆಯ ಕ್ರಿಕೆಟ್ ಅನ್ನು ರೋಶನಾರಾ ಕ್ಲಬ್ ಮೈದಾನದಲ್ಲಿ ಆಡಲಾಗುತ್ತದೆ. ಇದು ಈಗ ಫ್ಲಡ್‌ಲೈಟ್‌ಗಳನ್ನು ಹೊಂದಿದೆ. ಕ್ಲಬ್ ಅನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ () ಜನ್ಮಸ್ಥಳವೆಂದು ಪರಿಗಣಿಸಲಾಗಿದೆ. ಸ್ವಾತಂತ್ರ್ಯಾನಂತರದ ಕ್ರಿಕೆಟ್ ನಿರ್ವಾಹಕರು ಹಳೆಯ ಅಗ್ಗಿಸ್ಟಿಕೆ ಮುಂದೆ ಜಮಾಯಿಸಿ ಭಾರತೀಯ ಕ್ರಿಕೆಟ್ ಸಂಸ್ಥೆಯ ಸ್ಥಾಪನೆಗೆ ಮುನ್ನುಡಿ ಬರೆದರು. == ಇತಿಹಾಸ == ಉದ್ಯಾನ ಮತ್ತು ಸಮಾಧಿಯನ್ನು ರೋಶನಾರಾ ಬೇಗಂ ಅವರು ೧೬೫೦ ರಲ್ಲಿ ನಿರ್ಮಿಸಿದರು. ಅವರ ಸಮಾಧಿಯು ಉದ್ಯಾನದ ಮೂಲ ನೋಟದಲ್ಲಿ ಉಳಿದಿರುವ ಏಕೈಕ ರಚನೆಯಾಗಿದೆ. ಈ ಉದ್ಯಾನವು ಮೊಘಲ್ ಚಕ್ರವರ್ತಿ ಷಹಜಹಾನ್ ಅವರ ಮಗಳು ರೋಶನಾರಾ ಬೇಗಂ ಅವರ ಕೊಡುಗೆಯಾಗಿದೆ. ಔರಂಗಜೇಬನನ್ನು ಕೊಲ್ಲಲು ತಮ್ಮ ತಂದೆ ಮತ್ತು ದಾರಾ ಶಿಕೋ ನಡೆಸಿದ ಸಂಚನ್ನು ಯಶಸ್ವಿಯಾಗಿ ವಿಫಲಗೊಳಿಸಿದ ನಂತರ ರೋಶನಾರಾ ಅವರ ಅಧಿಕಾರ ಪ್ರಾರಂಭವಾಯಿತು. ಇತಿಹಾಸದ ಪ್ರಕಾರ, ಷಹಜಹಾನ್ ಕೌಟುಂಬಿಕ ಬಿಕ್ಕಟ್ಟನ್ನು ಶಾಂತಿಯುತವಾಗಿ ಪರಿಹರಿಸಲು ದೆಹಲಿಗೆ ಬರುವಂತೆ ಔರಂಗಜೇಬನಿಗೆ ಆಹ್ವಾನ ಪತ್ರವನ್ನು ಕಳುಹಿಸಿದನು. ಆದರೆ ಸತ್ಯದಲ್ಲಿ, ಷಹಜಹಾನ್ ಔರಂಗಜೇಬನನ್ನು ಸೆರೆಹಿಡಿಯಲು ಮತ್ತು ಕೊಲ್ಲಲು ಯೋಜಿಸಿದ್ದನು. ಏಕೆಂದರೆ ಷಹಜಹಾನ್ ಔರಂಗಜೇಬನಿಂದ ತನ್ನ ಸಿಂಹಾಸನಕ್ಕೆ ಕುತ್ತು ಬರುತ್ತದೆ ಎಂದು ಭಾವಿಸಿದ್ದನು. ರೋಶನಾರಾ ಅವರಿಗೆ ತಮ್ಮ ತಂದೆಯ ಯೋಜನೆಯ ಸುಳಿವು ಸಿಕ್ಕಿದಾಗ, ಅವರು ಔರಂಗಜೇಬ್‌ಗೆ ಸಂದೇಶವಾಹಕನನ್ನು ಕಳುಹಿಸಿ, ತಮ್ಮ ತಂದೆಯ ನಿಜವಾದ ಉದ್ದೇಶಗಳನ್ನು ವಿವರಿಸಿದರು ಮತ್ತು ದೆಹಲಿಯಿಂದ ದೂರವಿರುವಂತೆ ಔರಂಗಜೇಬ್‌ಗೆ ಎಚ್ಚರಿಕೆ ನೀಡಿದರು. ಔರಂಗಜೇಬ್ ಉತ್ತರಾಧಿಕಾರದ ಮೊಘಲ್ ಯುದ್ಧವನ್ನು ಗೆದ್ದ ನಂತರ, ತನ್ನ ಅಕ್ಕ ಮತ್ತು ಅವನ ತಂದೆಯ ನೆಚ್ಚಿನವಳಾದ ಜಹನಾರಾ ಬೇಗಂಅನ್ನು ಅವಳ ಪದವಿಯಿಂದ ತೆಗೆದುಹಾಕಿ, ಅವಳಿಗೆ ಪಾದ್ಶಾ ಬೇಗಂ ಎಂಬ ಬಿರುದನ್ನು ನೀಡಿದನು. ಏಕೆಂದರೆ ಅವಳು ಅವನ ಎದುರಾಳಿ ದಾರಾ ಶಿಕೋನನ್ನು ಬೆಂಬಲಿಸಿದ್ದಳು. ಔರಂಗಜೇಬನಿಗೆ ಬೆನ್ನೆಲುಬಾಗಿದ್ದ ಅವನ ವಿಶ್ವಾಸಾರ್ಹ ಆಪ್ತ ಸಲಹೆಗಾರರಾಗಿದ್ದ ರೋಶನಾರಾ ಅವರು ಪಾದ್ಶಾ ಬೇಗಂ ಅವರ ಸ್ಥಾನಕ್ಕೇರಿದರು. ಅಂದಿನಿಂದ, ರೋಶನಾರಾ ಸಾಮ್ರಾಜ್ಯದ ಅತ್ಯಂತ ಶಕ್ತಿಶಾಲಿ ಮತ್ತು ಶ್ರೇಷ್ಠ ಮಹಿಳೆ ಎಂದು ಪರಿಗಣಿಸಲ್ಪಟ್ಟರು. ನಿಶಾನ್‌ಗಳನ್ನು ನೀಡುವ ಹಕ್ಕನ್ನು ಸಹ ಆಕೆಗೆ ನೀಡಲಾಯಿತು. ಈ ಅಸಾಧಾರಣ ಸವಲತ್ತು ಸಾಮ್ರಾಜ್ಯಶಾಹಿ ಜನಾನದಲ್ಲಿ ಉನ್ನತ ಹುದ್ದೆಯನ್ನು ಹೊಂದಿರುವವರಿಗೆ ಮಾತ್ರ ಅನುಮತಿಸಲಾಗಿದೆ. ಅವರು ಮನ್ಸಬ್ದಾರ್ ಆಗಿ ನೇಮಕಗೊಂಡರು, ಚಕ್ರವರ್ತಿಯ ಸೈನ್ಯದಲ್ಲಿ ಉನ್ನತ-ಶ್ರೇಣಿಯ ಸ್ಥಾನವನ್ನು ಹೊಂದಿದ್ದರು. ಅವರು ತಮ್ಮ ಉನ್ನತ ಶೇಣಿಯ ಅಧಿಕಾರವನ್ನು ಔರಂಗಜೇಬನ ಅನುಪಸ್ಥಿತಿಯಲ್ಲಿ ಬಳಸಿಕೊಳ್ಳುತ್ತಿದರು. ೧೬೬೭/೮ ರಲ್ಲಿ, ಸಾಮ್ರಾಜ್ಯದ ವಾಸ್ತವಿಕ ಸಹ-ಆಡಳಿತಗಾರರಾಗಿ ರೋಶನಾರ ಅವರ ಅವಧಿಯು ಕೊನೆಗೊಂಡಿತು. ಅವರ ಶತ್ರುಗಳು ಅವರ ಆರ್ಥಿಕ ಮತ್ತು ನೈತಿಕ ಕ್ಷೋಭೆಯ ಕೃತ್ಯಗಳನ್ನು ಔರಂಗಜೇಬನ ಗಮನಕ್ಕೆ ತಂದರು. ಅತ್ಯಂತ ಕಟ್ಟುನಿಟ್ಟಾಗಿ ಮುಸ್ಲಿಂ ಧರ್ಮವನ್ನು ಪಾಲಿಸುವ ಔರಂಗಜೇಬ್, ರೋಶನಾರಾರ ಸ್ವೇಚ್ಛಾಚಾರದ ಜೀವನಶೈಲಿ ಮತ್ತು ಅವರ ದುರಾಸೆಯ ಸ್ವಭಾವದ ಬಗ್ಗೆ ತಿಳಿದು ಕೋಪಗೊಂಡನು. ದೆಹಲಿಗೆ ಹಿಂದಿರುಗಿದ ನಂತರ, ಅವನು ರೋಶನಾರಾರ ಅಧಿಕಾರವನ್ನು ಕಸಿದುಕೊಂಡನು ಮತ್ತು ಅವರನ್ನು ತನ್ನ ನ್ಯಾಯಾಲಯದಿಂದ ಹೊರಹಾಕಿದನು. ನಂತರ ಅವರು ರಾಜಕೀಯದಿಂದ ನಿವೃತ್ತಿ ಹೊಂದಲು ಮತ್ತು ಧಾರ್ಮಿಕ, ಏಕಾಂತ ಜೀವನವನ್ನು ನಡೆಸಲು ಹಳ್ಳಿಗಾಡಿನ ಅರಮನೆ-ತೋಟವನ್ನು ಅರಸಿದರು. == ಸಾರಿಗೆ == ಇಲ್ಲಿಗೆ ದೆಹಲಿ ಮೆಟ್ರೋದ ರೆಡ್ ಲೈನ್‌ನಲ್ಲಿರುವ ಪುಲ್ ಬಂಗಾಶ್ ಮೆಟ್ರೋ ನಿಲ್ದಾಣ ಸಂಪರ್ಕ ಕಲ್ಪಿಸುತ್ತದೆ. ಇದು ಗ್ರ್ಯಾಂಡ್ ಟ್ರಂಕ್ ರಸ್ತೆಯಲ್ಲಿ ರಾಷ್ಟ್ರೀಯ ಹೆದ್ದಾರಿ ೧ ರ ಸಮೀಪದಲ್ಲಿದೆ. == ಸಹ ನೋಡಿ == ದೆಹಲಿಯಲ್ಲಿ ಲಾಲ್ ಬಾಂಗ್ಲಾ, ಶಾ ಆಲಂ (೧೭೫೦-೧೮೦೬) ರ ತಾಯಿ ಲಾಲ್ ಕುನ್ವರ್ ಮತ್ತು ಅವರ ಮಗಳು ಬೇಗಂ ಜಾನ್ ಅವರ ಸಮಾಧಿ. ಲಾಲ್ ದರ್ವಾಜಾ, ಶೇರ್ ಶಾ ಸೂರಿಯ ದೆಹಲಿಯ ಹೊರಗಿನ ಗೋಡೆಗಳ ಉತ್ತರ ದ್ವಾರ. ಖೂನಿ ದರ್ವಾಜಾ ಎಂದೂ ಕರೆಯುತ್ತಾರೆ. == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == ಪೀಬಾಡಿ ಎಸೆಕ್ಸ್ ಮ್ಯೂಸಿಯಂನಲ್ಲಿರುವ ಫಿಲಿಪ್ಸ್ ಲೈಬ್ರರಿಯ ಹರ್ಬರ್ಟ್ ಆಫೆನ್ ಸಂಶೋಧನಾ ಸಂಗ್ರಹವನ್ನು ಸಂಗ್ರಹಿಸಲಾಗಿದೆ